Driving License Distribution to SHG Women Candidates
ರುಡ್ಸೆಟ್ ಸಂಸ್ಥೆಯು ಎನ್ಆರ್ಎಲ್ಎಂ ಯೋಜನೆಯಡಿಯಲ್ಲಿ ೩೦ ದಿನಗಳ ಉದ್ಯಮಶೀಲತಾಭಿವೃದ್ಧಿಯಲ್ಲಿ ಲಘು ಮೋಟಾರ್ ವಾಹನ ಚಾಲನಾ ತರಬೇತಿ ನಡೆಸಲಾಗಿದ್ದು. ಯಶಸ್ವಿಯಾಗಿ ತರಬೇತಿ ಪಡೆದು ಉದ್ಯೋಗಕ್ಕೆ ಸಿದ್ದರಾದ ಸ್ವಚ್ಚ ಭಾರತ ಅಭಿಯಾನದಡಿಯಲ್ಲಿ ಗ್ರಾಮ ಪಂಚಾಯಿತಿ ಹಂತದಲ್ಲಿ ಒಕ್ಕೂಟದಿಂದ ಆಯ್ಕೆಯಾದ ಸ್ವ ಸಹಾಯ ಗುಂಪಿನ ಮಹಿಳಾ ಅಭ್ಯರ್ಥಿಗಳಿಗೆ ಘನ ತ್ಯಾಜ್ಯ ಸಂಗ್ರಹಣಾ ವಾಹನಕ್ಕೆ ನಿಯೋಜನೆಗೊಂಡ ಆಟೋ/ವಾಹನ ಚಾಲನೆ ಮಾಡುವವರಿಗೆ ಚಾಲನಾ ಪರವಾನಗೆ ನೀಡುವ ಕಾರ್ಯಕ್ರಮವನ್ನು ದಿನಾಂಕ: ೦೪.೦೯.೨೦೨೩ ರಂದು ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು.
ಈ ತರಬೇತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ಬಿ.ಎಂ. ಸವಿತಾ, ಮಾನ್ಯ ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್, ಮೈಸೂರು ಇವರು ಭಾಗವಹಿಸಿದ್ದರು.
ಇವರು ಶಿಬಿರಾರ್ಥಿಗಳಿಗೆ ಚಾಲನ ಪರವಾನಗಿ ಪತ್ರ ವಿತರಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಎನ್ಆರ್ಎಲ್ಎಂ ಯೋಜನೆಯ ಮೂಲಕ ಹಮ್ಮಿಕೊಳ್ಳುತ್ತಲಿದೆ, ಅದರಲ್ಲಿ ಬಹಳ ಮಹತ್ತರ ಉದ್ದೇಶದ ಗ್ರಾಮೀಣ ಪ್ರದೇಶದಲ್ಲಿ ಘನ ತ್ಯಾಜ್ಯವಸ್ತುಗಳ ಕಸ ವಿಲೇವಾರಿಯು ಒಂದಾಗಿದೆ, ತ್ಯಾಜ್ಯ ವಿಲೇವಾರಿಯ ಜವಬ್ದಾರಿಯನ್ನು ಪ್ರತಿ ಗ್ರಾಮ ಪಂಚಾಯತಿಯ ಒಂದು ಒಕ್ಕೂಟವು ನಿರ್ವಹಿಸುವಂತೆ ತಿಳಿಸಲಾಗಿದೆ, ಅದರಂತೆ ಆಯಾ ಒಕ್ಕೂಟದ ವತಿಯಿಂದ ಆಯ್ಕೆಯಾದ ಸ್ವ ಸಹಾಯ ಸಂಘದ ಮಹಿಳಾ ಅಭ್ಯರ್ಥಿಗಳಿಗೆ ಲಘು ಮೋಟಾರ್ ವಾಹನ ಚಾಲನಾ ತರಬೇತಿ ನೀಡಿ ಅವರಿಗೆ ವಾಹನಗಳನ್ನು ವಿತರಿಸುವ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡುವ, ಸಾರ್ಥಕತೆ ಭಾವ ಮೂಡಿಸುವ ಕಾರ್ಯಕ್ರಮವಿದು ಎಂದು ಅಭಿಪ್ರಾಯಪಟ್ಟರು. ಅಂತೆಯೇ ಶಿಬಿರಾರ್ಥಿಗಳನ್ನು ಕುರಿತು ಮಾತನಾಡುತ್ತಾ ಎನ್ಆರ್ಎಲ್ಎಂ ವಿಭಾಗ ವಿನೂತನವಾದ ಕಾರ್ಯಕ್ರಮ ಇದ್ದಾಗಿದ್ದು, ಗ್ರಾಮಗಳ ತ್ಯಾಜ್ಯ ವಿಲೇವಾರಿಗೆ ಮಹಿಳೆಯರು ಮುಂದೆ ಬಂದು ಗ್ರಾಮಗಳ ಸ್ವಚ್ಚತೆಯ ಜೊತೆಗೆ ಸೌಂರ್ಯವನ್ನು ಹೆಚ್ಚಿಸುವ ಕಾರ್ಯಕ್ಕೆ ಮುನ್ನುಡಿ ಬರೆಯುವ ಕಾರ್ಯ ಅತ್ಯಂತ ಶ್ಲಾಘನೀಯವಾದದ್ದು. ಯಾವ ಕೆಲಸವು ಕೀಳೂ ಅಲ್ಲ, ಮೇಲೂ ಎಂಬುದು ಇಲ್ಲ ನಾವು ಮನಸ್ಪೂರ್ವಕವಾಗಿ ಮಾಡುವ ಪ್ರತಿ ಕೆಲಸ ದೊಡ್ಡ ಫಲವನ್ನು ನೀಡುತ್ತದೆ. ನಾವು ಮಾಡುವ ಕೆಲಸವನ್ನು ಪ್ರೀತಿ ಮತ್ತು ವಿಶ್ವಾಸದಿಂದ ಮಾಡುವುದರಿಂದ ಕೆಲಸದಲ್ಲಿ ಗೌರವ ದೊರೆಯುತ್ತದೆ ಎಂದು ತಿಳಿ ಹೇಳಿದರು. ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಸ್ವ ಉದ್ಯೋಗ ಮಾಡಿ ಸ್ವಾವಲಂಬನೆ ಸಾಧಿಸಲು ಹಲವಾರು ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರ ಫಲವನ್ನು ಪಡೆದು ನೀವುಗಳು ಸ್ವಾವಲಂಬಿಗಳಾಗಿ ಆತ್ಮವಿಶ್ವಾಸದಿಂದ ಬದುಕಬೇಕು ಎಂದು ಸಲಹೆ ನೀಡುತ್ತಾ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಆಶಾ ಎ.ಆರ್., ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ಎನ್ಆರ್ಎಲ್ಎಂ, ಮೈಸೂರು, ಶ್ರೀ ಬಸವರಾಜು, ಜಿಲ್ಲಾ ವ್ಯವಸ್ಥಾಪಕರು, ಎನ್ಆರ್ಎಲ್ಎಂ, ಮೈಸೂರು ಮತ್ತು ಶ್ರೀ ಸುಬ್ರಮಣ್ಯ, ಮ್ಯಾನೇಜರ್, ಮಾಂಡೋವಿ ಡ್ರೆöÊವಿಂಗ್ ಸ್ಕೂಲ್, ಮೈಸೂರು ಇವರುಗಳು ಉಪಸ್ಥಿತರಿದ್ದರು.
ಶ್ರೀಮತಿ ಸರಿತಾ ಕೆ.ಎಸ್. ನಿರ್ದೇಶಕರು, ರುಡ್ಸೆಟ್ ಸಂಸ್ಥೆ, ಮೈಸೂರು ಇವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಇವರು ಶಿಬಿರಾಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ಬದುಕಿಗೆ ನಾವೇ ಚಾಲಕರು, ಹಾಗೆಯೇ ನಾವೇ ನಿಯಂತ್ರಕರು, ಬದುಕು ನಮ್ಮ ನಿಯಂತ್ರಣದಲ್ಲಿದ್ದಾಗ ನಾವಿಡುವ ಪ್ರತಿ ನಿರ್ಧಾರದ ಹೆಜ್ಜೆಗಳನ್ನು ಸಧೃಡದಿಂದಿಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ನಮ್ಮ ಜೀವನವೆಂಬ ಬಂಡಿಯಲ್ಲಿ ಹಾದಿ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಗೇರ್ ಗಳನ್ನು ಬದಲಾಯಿಸುತ್ತಾ ಸಾಗಬೇಕು ಪ್ರಸ್ತುತತೆಗೆ ಹೊಂದಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶಿಬಿರಾರ್ಥಿಗಳಿಗೆ ಸುರಕ್ಷಿತವಾಗಿ ವಾಹನ ಚಲಾಯಿಸಿರಿ, ನಿಮ್ಮ ಸುರಕ್ಷತೆಯ ಜೊತೆಗೆ ಸಾರಿಗೆ ನಿಯಮಗಳನ್ನು ಪಾಲಸಿ ಎಂದು ಸಲಹೆ ಹೇಳಿದರು ಮತ್ತು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಸಂಸ್ಥೆಯ ಉಪನ್ಯಾಸಕರಾದ ಶ್ರೀ ಆರ್. ಪಾಲ್ರಾಜ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಅತಿಥಿಗಳನ್ನು ಕಾರ್ಯಕ್ರಮಕ್ಕೆ ಪರಿಚಯಿಸುತ್ತಾ ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯ ಉಪನ್ಯಾಸಕರಾದ ಶ್ರೀಮತಿ ಲತಾಮಣಿಯವರು ವಂದನಾರ್ಪಣೆ ಮಾಡಿದರು.
ಒಟ್ಟು ಕಾರ್ಯಕ್ರಮದಲ್ಲಿ ೬೦ ಜನ ಶಿಬಿರಾರ್ಥಿಗಳು ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.